23/04/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ತಂದೆಯ ಈ ಅಂಗಡಿಯು ಬಹಳ ಅದ್ಭುತವಾಗಿದೆ, ಈ ಅಂಗಡಿಯಲ್ಲಿ ಎಲ್ಲಾ ವಿಧವಾದ ಸಾಮಗ್ರಿಗಳು ಸಿಗುತ್ತವೆ, ಈ ಅಂಗಡಿಗೆ ನೀವು ಮಾಲೀಕರಾಗಿದ್ದೀರಿ”

ಪ್ರಶ್ನೆ:

ಈ ಅದ್ಭುತವಾದ ವ್ಯಾಪಾರಿಯನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ - ಏಕೆ?

ಉತ್ತರ:

ಏಕೆಂದರೆ ಇದು ಸ್ವಯಂ ಸರ್ವ ಖಜಾನೆಗಳ ಭಂಡಾರವಾಗಿದೆ. ಜ್ಞಾನದ, ಸುಖದ, ಶಾಂತಿಯ, ಪವಿತ್ರತೆಯ, ಎಲ್ಲಾ ಸಾಮಾನುಗಳ ಸಾಗರವಾಗಿದೆ, ಯಾರಿಗೆ ಏನು ಬೇಕೋ ಅದು ಸಿಗುತ್ತದೆ. ನಿವೃತ್ತಿ ಮಾರ್ಗದವರ ಬಳಿ ಈ ಸಾಮಾನುಗಳು ಸಿಗುವುದಿಲ್ಲ. ತಂದೆಯ ಸಮಾನ ಸಾಗರನೆಂದು ಯಾರೂ ಸಹ ಹೇಳಿಕೊಳ್ಳಲು ಸಾಧ್ಯವಿಲ್ಲ.

ಗೀತೆ:

ನಿಮ್ಮನ್ನು ಪಡೆದ ನಾನು..................

ಓಂ ಶಾಂತಿ. ಈಗ ಮಕ್ಕಳು ಬೇಹದ್ದಿನ ತಂದೆಯ ಸನ್ಮುಖದಲ್ಲಿದ್ದಾರೆ. ಇವರು ಬೇಹದ್ದಿನ ತಂದೆಯೆಂದೂ ಹೇಳಬಹುದು, ಬೇಹದ್ದಿನ ತಾತನೆಂದೂ ಹೇಳಬಹುದು, ಅದರಲ್ಲಿ ಬೇಹದ್ದಿನ ಮಕ್ಕಳೂ ಸಹ ಕುಳಿತಿದ್ದಾರೆ ಮತ್ತು ತಂದೆಯು ಬೇಹದ್ದಿನ ಜ್ಞಾನವನ್ನು ಕೊಡುತ್ತಿದ್ದಾರೆ. ಹದ್ದಿನ ಮಾತುಗಳು ಈಗ ಬಿಟ್ಟು ಹೋಯಿತು. ಈಗ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ. ಈಗ ಒಂದು ಅಂಗಡಿಯು ಮಾತ್ರವೇ ಇದೆ. ನಾವು ಏನನ್ನು ಬಯಸುತ್ತೇವೆಂದು ಮನುಷ್ಯರಿಗೆ ಗೊತ್ತಿಲ್ಲ. ಅವರಿಗೆ ಸುಖದ ಸಾಗರ, ಪವಿತ್ರತೆಯ ಸಾಗರ, ಆನಂದ ಸಾಗರ, ಜ್ಞಾನ ಸಾಗರ...... ಯಾವುದೇ ಅಂಗಡಿ ವ್ಯಾಪಾರಿಯಿದ್ದರೆ ಬಹಳ ವಿಧವಾದ ಸಾಮಾನುಗಳಿರುತ್ತವೆ ಅಂದಮೇಲೆ ಇವರು ಬೇಹದ್ದಿನ ತಂದೆಯಾಗಿದ್ದಾರೆ. ಇವರ ಬಳಿಯೂ ಸಹ ವಿಧವಿಧವಾದ ಸಾಮಗ್ರಿಗಳಿವೆ. ಏನೇನಿದೆ? ತಂದೆಯು ಜ್ಞಾನ ಸಾಗರ, ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಇವರ ಬಳಿ ಅದ್ಭುತವಾದ ಅಲೌಕಿಕವಾದ ಸಾಮಗ್ರಿಗಳಿವೆ. ಆದ್ದರಿಂದ ಗಾಯನವೂ ಇದೆ - ಸುಖಕರ್ತ. ಇದೊಂದೇ ಅಂಗಡಿಯಾಗಿದೆ, ಇಂತಹ ಅಂಗಡಿಯು ಯಾವುದೂ ಇಲ್ಲ. ಬ್ರಹ್ಮಾ-ವಿಷ್ಣು-ಶಂಕರನ ಬಳಿ ಯಾವ ಸಾಮಗ್ರಿಯಿದೆ, ಏನೂ ಇಲ್ಲ. ಅತಿ ಶ್ರೇಷ್ಠವಾದ ಸಾಮಗ್ರಿಯು ತಂದೆಯ ಬಳಿಯಿದೆ ಅದರಿಂದಲೇ ಅವರ ಮಹಿಮೆ ಮಾಡುತ್ತಾರೆ - ತ್ವಮೇವ ಮಾತಾಶ್ಚ ಪಿತಾ... ಇಂತಹ ಮಹಿಮೆಯು ಬೇರೆ ಯಾರದೂ ಆಗುವುದಿಲ್ಲ. ಮನುಷ್ಯರು ಶಾಂತಿಗಾಗಿ ಅಲೆದಾಡುತ್ತಾರೆ, ಕೆಲವರಿಗೆ ಶಾಂತಿಯು ಬೇಕು, ಕೆಲವರಿಗೆ ಇನ್ನೇನೋ ಬೇಕು. ಅವುಗಳೆಲ್ಲವೂ ಅಲ್ಪಕಾಲದ ಅಂಗಡಿಗಳಾಗಿವೆ. ಇಡೀ ಪ್ರಪಂಚದವರೆಲ್ಲರ ಬಳಿ ಹದ್ದಿನ ಸಾಮಾನುಗಳಿವೆ. ಈ ಒಬ್ಬ ತಂದೆಯ ಬಳಿಯೇ ಬೇಹದ್ದಿನ ಸಾಮಾನುಗಳಿವೆ ಆದ್ದರಿಂದಲೇ ಇವರ ಮಹಿಮೆಯನ್ನು ಪತಿತ-ಪಾವನ, ಲಿಬರೇಟರ್, ಜ್ಞಾನ ಸಾಗರ, ಆನಂದ ಸಾಗರ ಎಂದು ಕರೆಯುತ್ತಾರೆ. ಇವೆಲ್ಲವೂ ವಿಧ ವಿಧವಾದ ಸಾಮಾನುಗಳಾಗಿವೆ. ಪಟ್ಟಿ ಬರೆದರೆ ಬಹಳ ಆಗುತ್ತದೆ. ಈ ತಂದೆಯ ಬಳಿಯಿರುವ ಎಲ್ಲಾ ಸಾಮಾನುಗಳ ಮೇಲೂ ಮಕ್ಕಳಿಗೂ ಅಧಿಕಾರವಿದೆ. ತಂದೆಯ ಮಕ್ಕಳಾದ ಮೇಲೆ ಈ ಎಲ್ಲಾ ಸಾಮಗ್ರಿಗಳ ಮೇಲೆ ಮಾಲೀಕರಾಗುತ್ತೇವೆಂದು ಯಾರಿಗೂ ತಿಳಿದಿಲ್ಲ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ತಂದೆಯ ಬಳಿ ಏನು ಸಾಮಗ್ರಿಗಳಿವೆಯೋ ಅದನ್ನು ಅವಶ್ಯವಾಗಿ ತರುತ್ತಾರೆ. ಅವರ ಬಳಿ ಪಡೆದುಕೊಳ್ಳಲು ಹೋಗಲು ಸಾಧ್ಯವಿಲ್ಲ, ಕಲ್ಪ-ಕಲ್ಪವೂ, ಕಲ್ಪದ ಸಂಗಮದಲ್ಲಿ ನಾನೇ ಬರಬೇಕಾಗುತ್ತದೆಯೆಂದು ತಂದೆಯು ತಿಳಿಸುತ್ತಾರೆ. ನಾನು ಬಂದು ನಿಮಗೆ ಎಲ್ಲಾ ವಸ್ತುಗಳನ್ನು ಕೊಟ್ಟು ಹೋಗುತ್ತೇನೆ. ಎಂದೂ ಸಿಗದೇ ಇರುವ ವಸ್ತುಗಳನ್ನು ನಾನು ನಿಮಗೆ ಕೊಡುತ್ತೇನೆ. ಅರ್ಧ ಕಲ್ಪದವರೆಗೆ ನಿಮ್ಮ ಭಂಡಾರವು ತುಂಬುತ್ತದೆ, ಯಾವುದೇ ಅಪ್ರಾಪ್ತವಾದ ವಸ್ತುವು ಇಲ್ಲವೆಂದರೆ ಕರೆಯಬೇಕಾಗುವುದಿಲ್ಲ. ಡ್ರಾಮಾ ಪ್ಲಾನನುಸಾರವಾಗಿ ನೀವು ನಿಮ್ಮ ಆಸ್ತಿಯನ್ನು ಪಡೆದು ನಿಧಾನವಾಗಿ ಕೆಳಗಿಳಿಯಲೇಬೇಕಾಗಿದೆ. ಪುನರ್ಜನ್ಮವನ್ನೂ ಸಹ ಅವಶ್ಯವಾಗಿ ತೆಗೆದುಕೊಳ್ಳಲೇಬೇಕು, 84 ಜನ್ಮಗಳನ್ನು ಪಡೆಯಲೇಬೇಕಾಗಿದೆ. 84 ಜನ್ಮದ ಚಕ್ರವೆಂದು ಹೇಳುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡಿಲ್ಲ. 84ರ ಬದಲಾಗಿ 84 ಲಕ್ಷ ಜನ್ಮವೆಂದು ಹೇಳುತ್ತಾರೆ. ಮಾಯೆಯು ತಪ್ಪನ್ನು ಮಾಡಿಸಿ ಬಿಡುತ್ತದೆ. ಇದು ನೀವೀಗ ತಿಳಿದುಕೊಳ್ಳುತ್ತೀರೆಂದಮೇಲೆ ಬೇರೆಲ್ಲವನ್ನೂ ಮರೆತು ಬಿಡುತ್ತೀರಿ. ಈ ಸಮಯದಲ್ಲಿ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತೀರಿ, ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತೀರಿ ಆದರೆ ಅವರಿಗೆ ಇದು ತಿಳಿದಿಲ್ಲ - ಈ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಲಕ್ಷ್ಮೀ-ನಾರಾಯಣರು ಯಾವಾಗ ಇದ್ದರು? ಸ್ವರ್ಗದ ಸುಖದ ಬಗ್ಗೆಯೂ ಹಾಡುತ್ತಾರೆ. ಎಲ್ಲಾ ತರಹದ ಸುಖವನ್ನೂ ಕೊಡುತ್ತಾರೆ, ಇದಕ್ಕಿಂತ ಹೆಚ್ಚಾಗಿ ಸುಖವಿರಲು ಸಾಧ್ಯವಿಲ್ಲ. ಆದರೆ ಆ ಸುಖವು ಪ್ರಾಯಲೋಪವಾಗಿ ಬಿಡುತ್ತದೆ. ಅರ್ಧಕಲ್ಪದ ನಂತರ ರಾವಣನು ಬಂದು ಎಲ್ಲಾ ಸುಖವನ್ನು ಕಸಿದುಕೊಳ್ಳುತ್ತಾನೆ. ಯಾರಾದರೂ ಕೋಪ ಮಾಡಿಕೊಂಡರೆಂದರೆ ನಿಮ್ಮ ಕಲೆಯು ಸಮಾಪ್ತಿಯಾಗುತ್ತದೆ. ನೀವೂ ಸಹ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದಿರಿ, ಆ ಕಲೆಗಳು ಈಗ ಸಮಾಪ್ತಿಯಾಗಿ ಬಿಟ್ಟಿವೆ. ಒಬ್ಬ ತಂದೆಯ ವಿನಃ ಬೇರೆ ಯಾರದೂ ಸಹ ಮಹಿಮೆಯಿಲ್ಲ. ಹಣವಿದ್ದರೆ ಪ್ರಪಂಚವನ್ನೆಲ್ಲಾ ಸುತ್ತಿಕೊಂಡು ಬನ್ನಿ ಎಂದು ಹೇಳುತ್ತಾರಲ್ಲವೆ!

ನೀವು ವಿಚಾರ ಮಾಡಿ - ಸ್ವರ್ಗದಲ್ಲಿ ಎಷ್ಟೊಂದು ಸಮೃದ್ಧಿಯಾದ ಧನ-ಸಂಪತ್ತು ಇತ್ತು! ಈಗ ಅದು ಇದೆಯೇ? ಎಲ್ಲವೂ ಪ್ರಾಯಲೋಪವಾಗಿ ಬಿಡುತ್ತದೆ. ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾಗುತ್ತೀರಿ. ಧನ ಸಂಪತ್ತು ಪ್ರಾಯಲೋಪವಾಗುತ್ತದೆ ಮತ್ತು ಕೆಳಗಿಳಿದು ಬಿಡುತ್ತೀರಿ. ನಿಮಗೆ ಎಷ್ಟೊಂದು ಹಣವನ್ನು ಕೊಟ್ಟಿದ್ದೆನು, ವಜ್ರ ಸಮಾನ ಮಾಡಿದ್ದೆನು. ಆದರೆ ಆ ಧನ ಸಂಪತ್ತೆಲ್ಲವನ್ನೂ ಎಲ್ಲಿ ಕಳೆದು ಬಿಟ್ಟಿರಿ? ಎಂದು ತಂದೆಯು ತಿಳಿಸುತ್ತಾರೆ. ಈಗ ತಂದೆಯು ಪುನಃ ನಿಮ್ಮ ಆಸ್ತಿಯನ್ನು ಪಡೆಯಬೇಕೆಂದರೆ ಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ. ಬಾಬಾ ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಮೇಲಿರುವ ತುಕ್ಕು ಬಿಟ್ಟು ಹೋಗುವುದು. ಬಾಬಾ, ನೆನಪು ಮರೆತು ಹೋಗುತ್ತದೆ ಎಂದು ಮಕ್ಕಳು ಹೇಳುತ್ತಾರೆ. ಕನ್ಯೆಯ ವಿವಾಹವಾದ ಮೇಲೆ ತನ್ನ ಪತಿಯನ್ನು ಮರೆತು ಬಿಡುತ್ತಾಳೆಯೇ? ತಂದೆಯನ್ನು ಮಕ್ಕಳು ಮರೆಯುತ್ತಾರೆಯೇ? ತಂದೆಯಾದರೂ ದಾತನಾಗಿದ್ದಾರೆ. ಮಕ್ಕಳು ಆಸ್ತಿಯನ್ನು ಪಡೆಯಲು ನೆನಪು ಮಾಡಲೇಬೇಕಾಗಿದೆ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ, ವಿಕರ್ಮವನ್ನು ವಿನಾಶ ಮಾಡಿಕೊಳ್ಳಲು ನೆನಪಿನ ಯಾತ್ರೆಯ ವಿನಃ ಬೇರೆ ಯಾವುದೇ ಉಪಾಯವಿಲ್ಲ. ಭಕ್ತಿಮಾರ್ಗದಲ್ಲಿ ತೀರ್ಥ ಯಾತ್ರೆ, ಗಂಗಾಸ್ನಾನ ಮಾಡುತ್ತಾ ಏಣಿಯನ್ನಿಳಿಯುತ್ತಲೇ ಬಂದಿದ್ದೀರಿ. ಯಾರೂ ಸಹ ಮೇಲೇರಲು ಸಾಧ್ಯವಿಲ್ಲ, ಕಾಯಿದೆಯೂ ಇಲ್ಲ. ಎಲ್ಲರದೂ ಇಳಿಯುವ ಕಲೆಯಾಗಿದೆ. ಇಂತಹವರು ಮುಕ್ತಿಯಲ್ಲಿ ಹೋದರೆಂದು ಅಸತ್ಯವನ್ನೇ ಹೇಳುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಂದೆಯು ನಿಮ್ಮನ್ನು 16 ಕಲಾ ಸಂಪೂರ್ಣರನ್ನಾಗಿ ಮಾಡಲು ಬಂದಿದ್ದಾರೆ. ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ನೀವು ಹೇಳುತ್ತೀರಿ. ಈಗ ನಿಮ್ಮನ್ನು ಗುಣವಂತರನ್ನಾಗಿ ಮಾಡುತ್ತಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ನಾವೇ ಗುಣವಂತರು, ಪೂಜ್ಯರಾಗಿದ್ದೆವು, ನಾವೇ 5000 ವರ್ಷಗಳ ಹಿಂದೆ ಆಸ್ತಿಯನ್ನೂ ಪಡೆದಿದ್ದೆವು. ತಂದೆಯೂ ತಿಳಿಸುತ್ತಾರೆ - ನಾನು ನಿಮಗೆ ಆಸ್ತಿಯನ್ನು ಕೊಟ್ಟು ಹೋಗಿದ್ದೆನು, ಶಿವ ಜಯಂತಿ, ರಕ್ಷಾ ಬಂಧನ, ದಸರಾ ಇವೆಲ್ಲವನ್ನೂ ಮಾಡುತ್ತಲೇ ಬಂದಿರಿ ಆದರೂ ಸಹ ಏನನ್ನೂ ತಿಳಿದಿರಲಿಲ್ಲ. ಎಲ್ಲವನ್ನೂ ಮರೆತು ಹೋಗಿದ್ದೀರಿ. ತಂದೆಯು ಬಂದು ನೆನಪು ತರಿಸುತ್ತಾರೆ. ನೀವೇ ಇದ್ದಿರಿ ನಂತರ ನೀವೇ ರಾಜ್ಯಭಾಗ್ಯವನ್ನು ಕಳೆದುಕೊಂಡಿರಿ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವು ಹಳೆಯದು, ಜಡಜಡೀಭೂತವಾಗಿದೆ. ಪ್ರಪಂಚದವಂತೂ ಇದೇ ರೀತಿಯಾಗಿದೆ, ಇದೇ ಹೊಸ ಭಾರತವಾಗಿತ್ತು, ಈಗ ಹಳೆಯದಾಗಿದೆ. ಸ್ವರ್ಗದಲ್ಲಿ ಸದಾ ಸುಖವಿರುತ್ತದೆ. ದ್ವಾಪರದ ನಂತರ ದುಃಖ ಪ್ರಾರಂಭವಾಗುತ್ತದೆಯೆಂದರೆ ವೇದ, ಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಮಾಡುತ್ತಾರೆ. ಯಾವಾಗ ಭಕ್ತಿಯನ್ನು ಮಾಡುತ್ತೀರೋ ಆಗ ಭಗವಂತನು ಬಂದರಲ್ಲವೆ! ಬ್ರಹ್ಮನ ದಿನ, ಬ್ರಹ್ಮನ ರಾತ್ರಿ ಎಂದು ತಿಳಿಸುತ್ತಾರೆ ಅಂದಾಗ ಅರ್ಧ-ಅರ್ಧವಾಯಿತಲ್ಲವೆ. ಜ್ಞಾನವು ದಿನವಾಗಿದೆ, ಭಕ್ತಿಯು ರಾತ್ರಿಯಾಗಿದೆ. ಅವರು ಕಲ್ಪದ ಆಯಸ್ಸನ್ನು ಉಲ್ಟಾ-ಸುಲ್ಟಾ ಮಾಡಿದ್ದಾರೆ. ಮೊಟ್ಟ ಮೊದಲು ನೀವೇ ಎಲ್ಲರಿಗೂ ತಂದೆಯ ಮಹಿಮೆಯನ್ನು ತಿಳಿಸಿರಿ. ತಂದೆಯು ಜ್ಞಾನದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಕೃಷ್ಣನಿಗೆ ನಿರಾಕಾರ, ಪತಿತ-ಪಾವನ, ಸುಖದ ಸಾಗರ ಎಂದು ಹೇಳಲಾಗುತ್ತದೆಯೇ! ಅವರ ಮಹಿಮೆಯೇ ಭಿನ್ನವಾಗಿದೆ. ಹಗಲು-ರಾತ್ರಿಯ ವ್ಯತ್ಯಾಸವಿದೆ. ಶಿವನಿಗೇ ತಂದೆಯೆಂದು ಕರೆಯುತ್ತಾರೆ, ಕೃಷ್ಣನಿಗೆ ತಂದೆಯೆಂಬ ಮಾತು ಶೋಭಿಸುವುದಿಲ್ಲ. ಎಷ್ಟು ದೊಡ್ಡ ತಪ್ಪಾಗಿದೆ! ಚಿಕ್ಕ-ಚಿಕ್ಕ ತಪ್ಪುಗಳನ್ನು ಮಾಡುತ್ತಾ 100% ತಪ್ಪು ಆಗಿ ಬಿಟ್ಟಿದೆ. ಸನ್ಯಾಸಿಗಳೊಂದಿಗೆ ಎಂದೂ ಸಹ ವ್ಯವಹಾರ ನಡೆಸಲು ಸಾಧ್ಯವಿಲ್ಲ, ಅವರು ನಿವೃತ್ತಿ ಮಾರ್ಗದವರಾಗಿದ್ದಾರೆ, ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ. ನೀವು ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ. ಇದು ವಿಕಾರಿ ಪ್ರಪಂಚವಾಗಿದೆ. ಅಂದಾಗ ಸತ್ಯಯುಗದಲ್ಲಿ ಮಕ್ಕಳ ಜನ್ಮವಾಗುವುದಿಲ್ಲವೆ? ಅಲ್ಲಿಯೂ ಸಹ ವಿಕಾರವಿತ್ತು. ಅರೆ! ಅದಂತೂ ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಸಂಪೂರ್ಣ ನಿರ್ವಿಕಾರಿಗಳು ವಿಕಾರಿಗಳಾಗಲು ಹೇಗೆ ಸಾಧ್ಯ! ಮತ್ತೆ ಸತ್ಯಯುಗದಲ್ಲಿ ಇಷ್ಟೊಂದು ಮನುಷ್ಯರು ಹೇಗಿರಲು ಸಾಧ್ಯ. ಅಲ್ಲಿ ಇಷ್ಟೊಂದು ಜನಸಂಖ್ಯೆಯಿರಲು ಸಾಧ್ಯವೇ! ಭಾರತದ ವಿನಃ ಮತ್ತ್ಯಾವುದೇ ಖಂಡವಿರುವುದಿಲ್ಲ. ಇದನ್ನೂ ತಿಳಿಸಿದರೂ ಸಹ ನಾವು ನಂಬುವುದಿಲ್ಲವೆಂದು ಹೇಳುತ್ತಾರೆ. ಪ್ರಪಂಚವಂತೂ ಸದಾ ತುಂಬಿಯೇ ಇರುತ್ತದೆ, ಸ್ವಲ್ಪವೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ಭಾರತವು ಚಿನ್ನದ ಯುಗವಾಗಿತ್ತು, ಈಗ ಕಲ್ಲು ಬುದ್ಧಿ, ಕಬ್ಬಿಣದ ಯುಗವಾಗಿದೆ. ಈಗ ನೀವು ಮಕ್ಕಳು ಡ್ರಾಮವನ್ನು ತಿಳಿದುಕೊಂಡಿದ್ದೀರಿ. ಗಾಂಧೀಜಿಯವರು ರಾಮ ರಾಜ್ಯವನ್ನು ಬಯಸುತ್ತಿದ್ದರು ಆದರೆ ಮಹಾಭಾರತ ಯುದ್ಧವು ನಡೆಯಿತೆಂದು ತಿಳಿಸುತ್ತಾರೆ. ನಂತರ ಆಟವು ಮುಗಿದು ಹೋಯಿತು. ಆದ ನಂತರ ಏನಾಯಿತೆಂದು ತೋರಿಸುವುದಿಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ಇದಂತೂ ಅವಶ್ಯವಾಗಿ ಸಹಜವಾಗಿದೆ, ಶಿವ ಜಯಂತಿಯನ್ನು ಆಚರಿಸುತ್ತಾರೆಂದರೆ ಅವಶ್ಯವಾಗಿ ಶಿವ ತಂದೆಯು ಬರುತ್ತಾರಲ್ಲವೆ. ಅವರು ಸ್ವರ್ಗದ ರಚಯಿತ ಅಂದಮೇಲೆ ಸ್ವರ್ಗದ ಬಾಗಿಲನ್ನು ತೆರೆಯಲು ಬರುತ್ತಾರೆ. ಬರುವುದೂ ಸಹ ಯಾವಾಗ ಈ ಪ್ರಪಂಚ ನರಕವಾಗುತ್ತದೆಯೋ ಆಗ ಸ್ವರ್ಗದ ಬಾಗಿಲನ್ನು ತೆರೆದು ನರಕದ ಬಾಗಿಲನ್ನು ಮುಚ್ಚುತ್ತಾರೆ. ಸ್ವರ್ಗದ ಬಾಗಿಲನ್ನು ತೆಗೆದರು ಎಂದರೆ ಸ್ವರ್ಗದಲ್ಲಿ ಎಲ್ಲರೂ ಬರಬೇಕಲ್ಲವೆ. ಇದು ಅಷ್ಟೊಂದು ಕಠಿಣವಾದ ಮಾತಲ್ಲ, ಮಹಿಮೆಯಂತೂ ಒಬ್ಬ ತಂದೆಯದಾಗಿದೆ. ಶಿವ ತಂದೆಯ ಅಂಗಡಿಯು ಒಂದೇ ಇದೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ಬೇಹದ್ದಿನ ತಂದೆಯ ಮೂಲಕ ಭಾರತಕ್ಕೆ ಸ್ವರ್ಗದ ಸುಖ ಸಿಗುತ್ತದೆ. ಬೇಹದ್ದಿನ ತಂದೆಯು ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಿದ್ದಾರೆ ಅಂದಾಗ ಅವಶ್ಯವಾಗಿ ಬೇಹದ್ದಿನ ಸುಖವಿತ್ತು. ನಂತರ ನಾವು ನರಕದಲ್ಲಿ ಏಕೆ ಇದ್ದೇವೆ ಎಂದು ಯಾರಿಗೂ ತಿಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೇ ಇದ್ದಿರಿ, ಈಗ ನೀವೇ ಕೆಳಗಿಳಿದಿದ್ದೀರಿ. ದೇವತೆಗಳು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಈಗ ಬಂದು ಪತಿತರಾಗಿದ್ದಾರೆ ಮತ್ತೆ ಅವರನ್ನು ಪಾವನ ಮಾಡಬೇಕಾಗಿದೆ. ತಂದೆಯ ಜನ್ಮವಿದೆಯೆಂದಮೇಲೆ ರಾವಣನ ಜನ್ಮವೂ ಇದೆ. ಇದು ಯಾರಿಗೂ ಗೊತ್ತಿಲ್ಲ. ರಾವಣನನ್ನು ಯಾವಾಗಿನಿಂದ ಸುಡುತ್ತೀರಿ ಎಂದು ಯಾರನ್ನಾದರೂ ಕೇಳಿದರೆ ಇದು ಅನಾದಿಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಇವೆಲ್ಲಾ ರಹಸ್ಯಗಳನ್ನು ತಂದೆಯು ತಿಳಿಸುತ್ತಾರೆ. ಆ ತಂದೆಯ ಒಂದು ಅಂಗಡಿಯ ಮಹಿಮೆಯೇ ಇದೆ. ಸುಖ-ಶಾಂತಿ-ಪವಿತ್ರತೆಯನ್ನು ಮನುಷ್ಯರು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ. ಕೇವಲ ಒಬ್ಬರಿಗೇ ಮಾತ್ರವೇ ಶಾಂತಿ ಸಿಕ್ಕಿತೇ! ಇಂತಹವರಿಗೆ ಶಾಂತಿಯು ಸಿಕ್ಕಿತೆಂದು ಕೇವಲ ಸುಳ್ಳನ್ನೇ ಹೇಳುತ್ತಾರೆ. ಅರೆ! ಶಾಂತಿಯಂತು ಶಾಂತಿಧಾಮದಲ್ಲಿಯೇ ಸಿಗುತ್ತದೆ. ಇಲ್ಲಂತೂ ಒಬ್ಬರಿಗೆ ಶಾಂತಿಯಿದ್ದರೆ, ಇನ್ನೊಬ್ಬರು ಅಶಾಂತಿ ಉಂಟು ಮಾಡುವುದರಿಂದ ಶಾಂತಿಯಿಂದ ಇರಲು ಸಾಧ್ಯವಿಲ್ಲ. ಸುಖ, ಶಾಂತಿ, ಪವಿತ್ರತೆ ಎಲ್ಲಾ ಸಾಮಗ್ರಿಗಳ ವ್ಯಾಪಾರಿಯು ಒಬ್ಬ ಶಿವ ತಂದೆಯಾಗಿದ್ದಾರೆ. ಅವರೊಂದಿಗೆ ಯಾರು ಬೇಕಾದರೂ ಸಹ ವ್ಯಾಪಾರ ಮಾಡಬಹುದು. ಅವರನ್ನು ಸೌಧಾಗಾರ ಎಂದು ಕರೆಯುತ್ತಾರೆ. ಅವರ ಬಳಿ ಪವಿತ್ರತೆ, ಸುಖ-ಶಾಂತಿ, ಸಂಪತ್ತೆಲ್ಲವೂ ಇದೆ, ಅಪ್ರಾಪ್ತಿಯ ವಸ್ತು ಯಾವುದೂ ಇಲ್ಲ. ಸ್ವರ್ಗದ ರಾಜ್ಯವನ್ನು ನೀವು ಪಡೆಯುತ್ತೀರಿ, ತಂದೆಯು ಕೊಡಲು ಬಂದಿದ್ದಾರೆ. ಪಡೆಯುವವರು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸುಸ್ತಾಗಿ ಬಿಡುತ್ತಾರೆ. ನಾನು ಬರುವುದೇ ಕೊಡುವುದಕ್ಕಾಗಿ ಅಂದಮೇಲೆ ನೀವೇಕೆ ಪಡೆಯಲು ತಣ್ಣಗಾಗುತ್ತೀರಿ. ಬಾಬಾ, ಮಾಯೆಯ ಬಿರುಗಾಳಿಯು ಬರುತ್ತದೆಯೆಂದು ಮಕ್ಕಳು ತಿಳಿಸುತ್ತಾರೆ. ಹೌದು! ಬಹಳ ದೊಡ್ಡ ಪದವಿಯಾಗಿದೆ. ಸ್ವರ್ಗದ ಮಾಲೀಕರಾಗುವ ಮಾತು ಕಡಿಮೆ ಮಾತಾಗಿದೆಯೇ? ಪರಿಶ್ರಮವಂತೂ ಪಡಲೇಬೇಕು. ಶ್ರೀಮತದಂತೆ ನಡೆಯಿರಿ. ಸಿಗುವಂತಹ ಸಾಮಗ್ರಿಗಳನ್ನು ಹಂಚಬೇಕಾಗಿದೆ, ದಾನ ಮಾಡಬೇಕಾಗಿದೆ. ಪವಿತ್ರರಾಗಬೇಕೆಂದರೆ ಪಂಚ ವಿಕಾರಗಳ ದಾನವನ್ನು ಅವಶ್ಯವಾಗಿ ಮಾಡಬೇಕಾಗಿದೆ, ಪರಿಶ್ರಮ ಪಡಬೇಕಾಗಿದೆ. ತಂದೆಯನ್ನು ನೆನಪು ಮಾಡಿದಾಗಲೇ ತುಕ್ಕು ಬಿಟ್ಟು ಹೋಗುವುದು, ನೆನಪೇ ಮುಖ್ಯವಾಗಿದೆ. ವಿಕಾರದಲ್ಲಿ ಹೋಗುವುದಿಲ್ಲ, ಯಾರ ಮೇಲೂ ಕೋಪ ಮಾಡಿಕೊಳುವುದಿಲ್ಲವೆಂದು ಭಲೆ ಪ್ರತಿಜ್ಞೆಯಂತೂ ಮಾಡಿ ಆದರೆ ನೆನಪಿನಲ್ಲಂತೂ ಇರಲೇಬೇಕು. ಇಲ್ಲದಿದ್ದರೆ ಇಷ್ಟೊಂದು ಪಾಪವು ವಿನಾಶವಾಗಬೇಕು! ಬಾಕಿ ಜ್ಞಾನವಂತೂ ಬಹಳ ಸಹಜವಾಗಿದೆ. 84 ಜನ್ಮಗಳ ಚಕ್ರವನ್ನು ಹೇಗೆ ತಿರುಗಿಸುವುದು, ಇದನ್ನು ಯಾರಿಗೆ ಬೇಕಾದರೂ ತಿಳಿಸಬಹುದು ಬಾಕಿ ನೆನಪಿನ ಯಾತ್ರೆಯಲ್ಲಿರುವುದೇ ಪರಿಶ್ರಮವಿದೆ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಜ್ಞಾನವು ಏನು ಕೊಡುತ್ತದೆ? ಮನ್ಮನಾಭವ ಎಂದರೆ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ನೀವು ಗಾಯನವೂ ಹಾಡುತ್ತಿದ್ದಿರಿ - ನೀವು ಬಂದರೆ ಮತ್ತೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗದಲ್ಲಿ ಇರುತ್ತೇವೆ, ನಿಮ್ಮಮೇಲೆ ಬಲಿಹಾರಿಯಾಗುತ್ತೇವೆ, ನಿಮ್ಮ ವಿನಃ ಬೇರೆ ಯಾರನ್ನೂ ನೆನಪು ಮಾಡುವುದಿಲ್ಲ ಎಂದು. ಪ್ರತಿಜ್ಞೆಯನ್ನು ಮಾಡಿರುವುದು ಮರೆತು ಹೋಯಿತೆ! ಹೇಳುತ್ತಾರಲ್ಲವೆ – ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನೆನಪು ಮಾಡುತ್ತಿರಲಿ.... ನೀವು ಕರ್ಮಯೋಗಿಗಳಂತೂ ಆಗಿದ್ದೀರಲ್ಲವೆ. ವ್ಯಾಪಾರ ವ್ಯವಹಾರವನ್ನು ಮಾಡುತ್ತಲೂ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ಪ್ರಿಯತಮ ತಂದೆಯು ಸ್ವಯಂ ಹೇಳುತ್ತಾರೆ - ನೀವು ಪ್ರಿಯತಮೆಯರು ಅರ್ಧಕಲ್ಪ ನೆನಪು ಮಾಡಿದಿರಿ. ಈಗ ನಾನು ಬಂದಿದ್ದೇನೆ ನೆನಪು ಮಾಡಿ. ಈಗ ಘಳಿಗೆ-ಘಳಿಗೆಗೆ ನೆನಪು ಮರೆತು ಹೋಗುತ್ತದೆ, ಇದರಲ್ಲಿಯೇ ಪರಿಶ್ರಮವಿದೆ. ಕರ್ಮಾತೀತ ಸ್ಥಿತಿಯಾದರೆ ಈ ಶರೀರವನ್ನು ಬಿಡಬೇಕಾಗುತ್ತದೆ. ರಾಜಧಾನಿಯು ಸ್ಥಾಪನೆಯಾಯಿತೆಂದರೆ ಕರ್ಮಾತೀತ ಸ್ಥಿತಿಯನ್ನು ಪಡೆದುಕೊಳ್ಳುತ್ತೀರಿ. ನೀವಂತೂ ಈಗ ಎಲ್ಲರೂ ಪುರುಷಾರ್ಥಿಗಳಾಗಿದ್ದೀರಿ. ಎಲ್ಲರಿಗಿಂತ ಹೆಚ್ಚು ಮಮ್ಮಾ-ಬಾಬಾ ನೆನಪು ಮಾಡುತ್ತಾರೆ, ಸೂಕ್ಷ್ಮವತನದಲ್ಲಿಯೂ ಕಂಡು ಬರುತ್ತದೆ.

ನಾನು ಯಾರಲ್ಲಿ ಪ್ರವೇಶಿಸುತ್ತೇನೆಯೋ ಅವರು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಇದ್ದಾರೆ. ಅವರೂ ಪುರುಷಾರ್ಥ ಮಾಡುತ್ತಾರೆಂದು ತಂದೆಯು ತಿಳಿಸುತ್ತಾರೆ. ಕರ್ಮಾತೀತ ಸ್ಥಿತಿಯಂತೂ ಯಾರೂ ಸಹ ಈಗಲೇ ತಲುಪಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯು ಬಂದು ಬಿಟ್ಟಿತೆಂದರೆ ಈ ಶರೀರವಿರಲು ಸಾಧ್ಯವಿಲ್ಲ. ತಂದೆಯಂತು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ, ಇದೆಲ್ಲವೂ ತಿಳಿದುಕೊಳ್ಳುವವರ ಬುದ್ಧಿಯ ಮೇಲೆ ಆಧಾರಿತವಾಗಿದೆ. ಸ್ವರ್ಗದ ರಚಯಿತನು ಒಬ್ಬರೇ ಆಗಿದ್ದಾರೆ, ಅವರ ಬಳಿಯೇ ಜ್ಞಾನದ ಎಲ್ಲಾ ಸಾಮಗ್ರಿಗಳಿವೆ, ಅವರೇ ಜಾದೂಗಾರನಾಗಿದ್ದಾರೆ, ಬೇರೆ ಯಾರಿಂದಲೂ ಸುಖ, ಶಾಂತಿ, ಪವಿತ್ರತೆಯ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಕುಳಿತು ಬಹಳ ಚೆನ್ನಾಗಿ ತಿಳಿಸುತ್ತಾರೆ. ಮಕ್ಕಳು ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸಬೇಕಾಗಿದೆ. ಎಷ್ಟು ಧಾರಣೆ ಮಾಡುತ್ತೀರೋ ಅಷ್ಟು ಆಸ್ತಿಯು ಸಿಗುತ್ತದೆ. ದಿನ-ಪ್ರತಿದಿನ ಬಹಳ ವಿಧವಿಧವಾದ ಸಾಮಗ್ರಿಗಳನ್ನು ಸಿಗುತ್ತವೆ. ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಮಧುರವಾಗಿದ್ದಾರೆ! ಅವರಂತೆಯೇ ಮಧುರರಾಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ್ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ. ಬೇರೆ ಯಾವುದೇ ಸತ್ಸಂಗಗಳಲ್ಲಿ ಈ ರೀತಿ ಹೇಳುತ್ತಾರೆಯೇ? ಇದಂತೂ ಅವಶ್ಯವಾಗಿ ನಮ್ಮದು ಹೊಸ ಭಾಷೆಯಾಗಿದೆ. ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ:

1) ತಂದೆಯ ಮೂಲಕ ಸುಖ, ಶಾಂತಿ, ಪವಿತ್ರತೆಯ ಯಾವ ಸಾಮಗ್ರಿಗಳು ಸಿಗುತ್ತವೆ, ಅವುಗಳನ್ನು ಅನ್ಯರಿಗೂ ದಾನ ಮಾಡಬೇಕು. ಮೊದಲು ವಿಕಾರಗಳನ್ನು ದಾನ ಮಾಡಿ ಪವಿತ್ರರಾಗಬೇಕು ನಂತರ ಅವಿನಾಶಿ ಜ್ಞಾನ ಧನದ ದಾನ ಮಾಡಬೇಕಾಗಿದೆ.

2) ದೇವತೆಗಳಂತೆ ಮಧುರರಾಗಬೇಕಾಗಿದೆ. ಬಾಪ್ದಾದಾರವರ ಜೊತೆ ಯಾವ ಪ್ರತಿಜ್ಞೆ ಮಾಡಿದ್ದೀರೋ ಅದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮತ್ತು ತಂದೆಯ ನೆನಪಿನಲ್ಲಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಬೇಕಾಗಿದೆ.

ವರದಾನ:

ತಮ್ಮ ಬಗ್ಗೆ ಅಥವಾ ಸರ್ವ ಆತ್ಮರ ಬಗ್ಗೆ ಲಾ-ಫುಲ್ (ನಿಯಮಬದ್ಧ) ಆಗುವಂತಹ ಲಾ-ಮೇಕರ್(ನಿಯಮ ರೂಪಿಸುವ)ನಿಂದ ನ್ಯೂ ವರ್ಲ್ಡ್ ಮೇಕರ್ (ಹೊಸ ಪ್ರಪಂಚದ ನಿರ್ಮಾತ) ಭವ.

ಯಾರು ಸ್ವಯಂನ ಬಗ್ಗೆ ನಿಯಮ ಬದ್ಧವಾಗಿ ಇರುತ್ತಾರೆಯೋ, ಅವರೇ ಅನ್ಯರ ಬಗ್ಗೆಯೂ ನಿಯಮ ಬದ್ಧರಾಗಲು ಸಾಧ್ಯವಾಗುವುದು. ಯಾರು ತನ್ನ ನಿಯಮಗಳನ್ನೇ ಮುರಿಯುತ್ತಾರೆಯೋ, ಅವರು ಅನ್ಯರ ಮೇಲೆ ನಿಯಮವನ್ನು ಚಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ತಮ್ಮನ್ನು ತಾವು ನೋಡಿಕೊಳ್ಳಿರಿ - ಮುಂಜಾನೆಯಿಂದ ರಾತ್ರಿಯವರೆಗೂ ಮನಸ್ಸಿನ ಸಂಕಲ್ಪದಲ್ಲಿ, ವಾಣಿಯಲ್ಲಿ, ಕರ್ಮದಲ್ಲಿ, ಸಂಪರ್ಕ ಅಥವಾ ಒಬ್ಬರಿನ್ನೊಬ್ಬರಿಗೆ ಸಹಯೋಗ ಕೊಡುವುದರಲ್ಲಿ ಅಥವಾ ಸೇವೆಯಲ್ಲಿ, ಎಲ್ಲಿಯೂ ನಿಯಮಗಳ ಉಲ್ಲಂಘನೆಯಂತು ಆಗುತ್ತಿಲ್ಲವೇ! ಯಾರು ನಿಯಮಗಳನ್ನು ರೂಪಿಸುವವರು ಆಗಿರುತ್ತಾರೆ, ಅವರು ನಿಯಮಗಳ ಉಲ್ಲಂಘನೆ ಮಾಡುವವರಾಗಲು ಸಾಧ್ಯವಿಲ್ಲ. ಯಾರು ಈ ಸಮಯದಲ್ಲಿ ಲಾ-ಮೇಕರ್ ಆಗುತ್ತಾರೆಯೋ ಅವರೇ ಪೀಸ್-ಮೇಕರ್ (ಶಾಂತಿ ಸ್ಥಾಪನೆ ಮಾಡುವವರು), ಹೊಸ ಪ್ರಪಂಚದ ನಿರ್ಮಾತರಾಗುತ್ತಾರೆ.

ಸ್ಲೋಗನ್:

ಕರ್ಮವನ್ನು ಮಾಡುತ್ತಾ ಕರ್ಮದ ಒಳ್ಳೆಯ ಅಥವಾ ಕೆಟ್ಟದರ ಪ್ರಭಾವದಲ್ಲಿ ಬರದೇ ಇರುವುದೇ ಕರ್ಮಾತೀತ ಸ್ಥಿತಿ ಆಗಿದೆ.