28.04.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಯೋಗದಿಂದಲೇ ಆತ್ಮದಲ್ಲಿರುವ ತುಕ್ಕು ಬಿಟ್ಟು ಹೋಗುತ್ತದೆ, ತಂದೆಯಿಂದ ಪೂರ್ಣ ಆಸ್ತಿಯು ಸಿಗುತ್ತದೆ
ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಯೋಗಬಲವನ್ನು ಹೆಚ್ಚಿಸಿಕೊಳ್ಳಿ”
ಪ್ರಶ್ನೆ:
ದೇವಿ-ದೇವತೆಗಳ
ಕರ್ಮವು ಶ್ರೇಷ್ಠವಾಗಿತ್ತು, ಈಗ ಕರ್ಮ ಭ್ರಷ್ಟವಾಗಿದೆ - ಏಕೆ?
ಉತ್ತರ:
ಏಕೆಂದರೆ ತಮ್ಮ ಅಸಲೀ ಧರ್ಮವನ್ನು ಮರೆತು ಹೋಗಿದ್ದಾರೆ. ಧರ್ಮವನ್ನು ಮರೆತು ಹೋಗಿರುವ ಕಾರಣ ಯಾವುದೇ
ಕರ್ಮವನ್ನು ಮಾಡಿದರೂ ಅದು ಭ್ರಷ್ಟವಾಗುತ್ತದೆ. ತಂದೆಯು ಈಗ ನಿಮಗೆ ತಮ್ಮ ಸತ್ಯ ಧರ್ಮದ ಪರಿಚಯವನ್ನು
ಕೊಡುತ್ತಾರೆ. ಜೊತೆ ಜೊತೆಗೆ ಪ್ರಪಂಚದ ಇತಿಹಾಸ-ಭೂಗೋಳವನ್ನೂ ತಿಳಿಸುತ್ತಾರೆ ಯಾವುದನ್ನು
ನೀವೆಲ್ಲರಿಗೂ ತಿಳಿಸಬೇಕಾಗಿದೆ. ತಂದೆಯ ಸತ್ಯ ಪರಿಚಯವನ್ನೂ ಕೊಡಬೇಕಾಗಿದೆ.
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ....
ಓಂ ಶಾಂತಿ.
ಇದನ್ನು ಯಾರು ಯಾರಿಗೆ ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು. ಯಾವ ಮಕ್ಕಳು ಪತಿತರಿಂದ
ಪಾವನರಾಗುತ್ತಿದ್ದಾರೆಯೋ ಅವರಿಗೆ ಹೇಳುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು
ಭಾರತವಾಸಿಗಳು ದೇವಿ-ದೇವತೆಗಳಾಗಿದ್ದೆವು, ಈಗ 84 ಜನ್ಮಗಳ ಚಕ್ರವನ್ನು ಸುತ್ತಿ ಸತೋಪ್ರಧಾನದಿಂದ
ಈಗ ಸತೋ, ರಜೋ, ತಮೋಪ್ರಧಾನರಾಗಿದ್ದೇವೆ. ಪತಿತರನ್ನು ಪಾವನ ಮಾಡುವಂತಹ ಒಬ್ಬ ತಂದೆಯು ಹೇಳುತ್ತಾರೆ
- ನೀವು ನಿಮ್ಮ ಹೃದಯದಿಂದ ಕೇಳಿಕೊಳ್ಳಿ - ನಾನು ಎಲ್ಲಿಯವರೆಗೆ ಪುಣ್ಯಾತ್ಮನಾಗಿದ್ದೇನೆ? ನೀವು
ಸತೋಪ್ರಧಾನ, ಪವಿತ್ರ ಆತ್ಮಗಳಾಗಿದ್ದಿರಿ, ಮೊಟ್ಟ ಮೊದಲು ನಿಮ್ಮನ್ನು ದೇವಿ-ದೇವತೆಗಳೆಂದೂ
ಕರೆಯಲಾಗುತ್ತಿತ್ತು ಯಾವುದನ್ನು ಆದಿ ಸನಾತನ ದೇವಿ-ದೇವತಾ ಧರ್ಮವೆಂದು ಕರೆಯಲಾಗುತ್ತಿತ್ತು. ಈಗ
ಯಾವುದೇ ಭಾರತವಾಸಿಯು ತನ್ನನ್ನು ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವುದಿಲ್ಲ. ಹಿಂದೂ
ಧರ್ಮವೆನ್ನುವುದು ಯಾವುದೂ ಇಲ್ಲ, ಆದರೆ ಪತಿತರಾಗಿರುವ ಕಾರಣ ತಮ್ಮನ್ನು ತಾವು ದೇವತೆಗಳೆಂದು
ಹೇಳಿಕೊಳ್ಳುವುದಿಲ್ಲ. ಸತ್ಯಯುಗದಲ್ಲಿ ದೇವತೆಗಳು ಪವಿತ್ರರಾಗಿದ್ದರು, ಪವಿತ್ರ ಪ್ರವೃತ್ತಿ
ಮಾರ್ಗವಿತ್ತು. ಯಥಾ ರಾಜ-ರಾಣಿ ತಥಾ ಪ್ರಜೆಗಳಾಗಿದ್ದರು. ಭಾರತವಾಸಿಗಳಿಗೆ ತಂದೆಯು ನೆನಪು
ತರಿಸುತ್ತಾರೆ - ನೀವು ಪವಿತ್ರ ಪ್ರವೃತ್ತಿ ಮಾರ್ಗದವರು ಆದಿ ಸನಾತನ ದೇವಿ-ದೇವತಾ
ಧರ್ಮದವರಾಗಿದ್ದಿರಿ, ಅದನ್ನು ಸ್ವರ್ಗವೆಂದು ಹೇಳಲಾಗುತ್ತಿತ್ತು. ಅಲ್ಲಿ ಒಂದೇ ಒಂದು ಧರ್ಮವಿತ್ತು.
ಮೊದಲ ನಂಬರಿನ ಮಹಾರಾಜ-ಮಹಾರಾಣಿ ಲಕ್ಷ್ಮೀ-ನಾರಾಯಣರಾಗಿದ್ದರು, ಅವರ ವಂಶವಿತ್ತು. ಭಾರತವು ಬಹಳ
ಸಂಪದ್ಭರಿತವಾಗಿತ್ತು, ಅದು ಸತ್ಯಯುಗವಾಗಿತ್ತು. ನಂತರ ತ್ರೇತಾದಲ್ಲಿಯೂ ಸಹ ಪೂಜ್ಯ ದೇವಿ-ದೇವತೆಗಳು
ಅಥವಾ ಕ್ಷತ್ರಿಯರೆಂದು ಕರೆಯಲಾಗುತ್ತಿತ್ತು. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯ, ಅಲ್ಲಿ
ಸೀತಾ-ರಾಮರ ರಾಜ್ಯ, ಅಲ್ಲಿ ವಂಶಾವಳಿಯು ನಡೆಯಿತು. ಹೇಗೆ ಕ್ರಿಶ್ಚಿಯನ್ನರಲ್ಲಿ ಎಡ್ವರ್ಡ್ ಧಿ
ಫಸ್ಟ್, ಸೆಕೆಂಡ್....... ಅದೇರೀತಿ ಭಾರತದಲ್ಲಿಯೂ ನಡೆಯುತ್ತದೆ. 5000 ವರ್ಷದ ಮಾತು ಅಂದರೆ 5000
ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆದರೆ ಅವರಿಗೆ ಈ ರಾಜ್ಯವು ಯಾವಾಗ, ಹೇಗೆ
ಸಿಕ್ಕಿತೆಂದು ಯಾರಿಗೂ ಗೊತ್ತಿಲ್ಲ. ಅದೇ ಸೂರ್ಯವಂಶಿ ಪುನಃ ಚಂದ್ರವಂಶಿಯಲ್ಲಿ ಬಂದರು, ಏಕೆಂದರೆ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇಳಿಯಲೇಬೇಕು. ಈ ಭಾರತದ ಇತಿಹಾಸ-ಭೂಗೋಳವು ಯಾರಿಗೂ
ತಿಳಿದಿಲ್ಲ. ರಚಯಿತ ತಂದೆಯೆಂದರೆ ಅವಶ್ಯವಾಗಿ ಸತ್ಯಯುಗ, ಹೊಸ ಪ್ರಪಂಚದ ರಚನೆ ಮಾಡಿರಬೇಕು. ತಂದೆಯು
ತಿಳಿಸುತ್ತಾರೆ - ಇಂದಿಗೆ 5000 ವರ್ಷಗಳ ಹಿಂದೆ ಸ್ವರ್ಗದಲ್ಲಿದ್ದೀರಿ. ಈ ಭಾರತವು
ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಈ ಪ್ರಪಂಚದವರಿಗಂತೂ ಪ್ರಪಂಚದ ಇತಿಹಾಸ-ಭೂಗೋಳದ ಬಗ್ಗೆ
ತಿಳಿದುಕೊಂಡಿಲ್ಲ. ಅವರಿಗಂತೂ ಅಪೂರ್ಣವಾದ ಕಡೆಯ ಅರ್ಧ ಇತಿಹಾಸವು ಗೊತ್ತಿದೆ. ಸತ್ಯಯುಗ-ತ್ರೇತಾದ
ಇತಿಹಾಸ-ಭೂಗೋಳವು ಯಾರಿಗೂ ಗೊತ್ತಿಲ್ಲ. ಋಷಿ-ಮುನಿಗಳೂ ಸಹ ಹೇಳುತ್ತಿದ್ದರು - ನಮಗೆ ರಚಯಿತ,
ರಚನೆಯ ಆದಿ-ಮಧ್ಯವು ಗೊತ್ತಿಲ್ಲ ಎಂದು. ತಿಳಿದುಕೊಳ್ಳಲೂ ಹೇಗೆ ಸಾಧ್ಯ! ತಂದೆಯು ಕುಳಿತು ನಿಮಗೇ
ತಿಳಿಸುತ್ತಾರೆ. ಶಿವ ತಂದೆಯು ಭಾರತದಲ್ಲಿಯೇ ದಿವ್ಯವಾದ ಜನ್ಮವನ್ನು ತೆಗೆದುಕೊಳ್ಳುತ್ತಾರೆ,
ಇಲ್ಲಿಯೇ ಶಿವ ಜಯಂತಿಯೂ ಆಗುತ್ತದೆ. ಶಿವ ಜಯಂತಿಯ ನಂತರ ಗೀತಾ ಜಯಂತಿಯಾಗಬೇಕು. ನಂತರ ಜೊತೆ
ಜೊತೆಯಲ್ಲಿಯೂ ಆಗಬೇಕು. ಆದರೆ ಈ ಶಿವ ಜಯಂತಿಯು ಯಾವಾಗ ಆಯಿತು? ಈ ರಹಸ್ಯವನ್ನು ಭಾರತವಾಸಿಗಳು
ತಿಳಿದುಕೊಂಡಿಲ್ಲ. ಬುದ್ಧ ಜಯಂತಿ, ಕ್ರೈಸ್ಟ್ ಜಯಂತಿ ಯಾವಾಗ ಆಯಿತು ಎಂದು ಬೇರೆ ಧರ್ಮದವರು ತಕ್ಷಣ
ತಿಳಿಸುತ್ತಾರೆ. ಶಿವ ಜಯಂತಿ ಯಾವಾಗ ಆಯಿತು ಎಂದು ಯಾವುದೇ ಭಾರತವಾಸಿಯನ್ನು ಕೇಳಿದರೆ ಯಾರೂ
ತಿಳಿಸಲು ಸಾಧ್ಯವಿಲ್ಲ. ಭಾರತದಲ್ಲಿಯೇ ಶಿವನು ಬಂದು ಏನು ಮಾಡಿದರು ಎಂದು ಯಾರಿಗೂ ಗೊತ್ತಿಲ್ಲ.
ಶಿವ ಎಲ್ಲಾ ಆತ್ಮರುಗಳ ತಂದೆಯಾಗಿದ್ದಾರೆ. ಆತ್ಮವು ಅವಿನಾಶಿಯಾಗಿದೆ, ಆತ್ಮವು ಒಂದು ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದು 84 ಜನ್ಮಗಳ ಚಕ್ರವಾಗಿದೆ. ಶಾಸ್ತ್ರಗಳಲ್ಲಂತೂ
84 ಲಕ್ಷಜನ್ಮಗಳೆಂದು ಸುಳ್ಳು ಹೇಳಿ ಬಿಟ್ಟಿದ್ದಾರೆ. ತಂದೆಯು ಬಂದು ಸತ್ಯವಾದ ಮಾತನ್ನು
ತಿಳಿಸುತ್ತಾರೆ. ತಂದೆಯ ಬಿಟ್ಟರೆ ಯಾರೂ ರಚಯಿತ, ರಚನೆಯ ಬಗ್ಗೆ ಸುಳ್ಳನ್ನೇ ಹೇಳುತ್ತಾರೆ ಏಕೆಂದರೆ
ಇದು ಮಾಯೆಯ ರಾಜ್ಯವಾಗಿದೆ. ಮೊದಲು ನೀವೆಲ್ಲರೂ ಪಾರಸ ಬುದ್ಧಿಯವರಾಗಿದ್ದಿರಿ, ಭಾರತವು ವಜ್ರ
ಸಮಾನವಾಗಿತ್ತು. ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳಿತ್ತು, ತಂದೆಯು ಕುಳಿತು ರಚಯಿತ ಮತ್ತು
ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯ ಅರ್ಥಾತ್ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ಭಾರತವಾಸಿಗಳಿಗೆ
ಇದು ಗೊತ್ತಿಲ್ಲ - ನಾವು ಮೊಟ್ಟ ಮೊದಲು ದೇವಿ-ದೇವತೆಗಳಾಗಿದ್ದೆವು, ಈಗ ಪತಿತ, ಕಂಗಾಲರು,
ಅಧರ್ಮಿಗಳಾಗಿದ್ದೇವೆ, ನಮ್ಮ ಧರ್ಮವನ್ನು ಮರೆತು ಹೋಗಿದ್ದೇವೆ ಎಂದು. ಇದು ಡ್ರಾಮಾನುಸಾರ
ನಡೆಯಲೇಬೇಕಾಗಿದೆ. ಈ ಪ್ರಪಂಚದ ಇತಿಹಾಸ-ಭೂಗೋಳವು ಬುದ್ಧಿಯಲ್ಲಿರಬೇಕಾಗಿದೆ, ಶ್ರೇಷ್ಠಾತಿ
ಶ್ರೇಷ್ಠವಾದ ಎಲ್ಲಾ ಆತ್ಮರ ತಂದೆಯು ಮೂಲವತನದಲ್ಲಿರುತ್ತಾರೆ ನಂತರ ಸೂಕ್ಷ್ಮವತನವಿರುತ್ತದೆ. ಇದು
ಸ್ಥೂಲವತನವಾಗಿದೆ. ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರನು ಮಾತ್ರವೇ ಇರುತ್ತಾರೆ. ಅವರದು
ಯಾವುದೇ ಇತಿಹಾಸ-ಭೂಗೋಳವಿಲ್ಲ. ಇವು ಮೂರು ಲೋಕಗಳಾಗಿವೆ. ಭಗವಂತನು ಒಬ್ಬರೇ ಆಗಿದ್ದಾರೆ, ಅವರ
ರಚನೆಯು ಒಂದೇ ಆಗಿದೆ. ಯಾವ ಚಕ್ರವು ತಿರುತ್ತಲೇ ಇರುವುದು, ಸತ್ಯಯುಗದಿಂದ ತ್ರೇತಾ, ತ್ರೇತಾದಿಂದ
ನಂತರ ದ್ವಾಪರ-ಕಲಿಯುಗದಲ್ಲಿ ಬರಲೇಬೇಕಾಗಿದೆ. 84 ಜನ್ಮಗಳ ಲೆಕ್ಕ ಬೇಕಲ್ಲವೆ. ಇದು ಯಾರಿಗೂ
ಗೊತ್ತಿಲ್ಲ. ಇದ್ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. 84 ಜನ್ಮಗಳ ಪಾತ್ರವನ್ನು ನೀವು ಮಕ್ಕಳೇ
ಅಭಿನಯಿಸುತ್ತೀರಿ. ತಂದೆಯಂತೂ ಈ ಚಕ್ರದಲ್ಲಿ ಬರುವುದೇ ಇಲ್ಲ, ಮಕ್ಕಳು ಪಾವನರಿಂದ ಪತಿತರಾಗುತ್ತಾರೆ.
ಆದ್ದರಿಂದಲೇ ಕೂಗುತ್ತಾರೆ - ಬಾಬಾ, ಬಂದು ನಮ್ಮನ್ನು ಪುನಃ ಪಾವನರನ್ನಾಗಿ ಮಾಡಿ. ರಾವಣ
ರಾಜ್ಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ, ಅವರನ್ನು ಮತ್ತೆ ಮುಕ್ತರನ್ನಾಗಿ ಮಾಡಿ ರಾಮ ರಾಜ್ಯಕ್ಕೆ
ಕರೆದುಕೊಂಡು ಹೋಗು ಒಬ್ಬನನ್ನೇ ಎಲ್ಲರೂ ಕರೆಯುತ್ತಾರೆ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ
ರಾಜ್ಯವಾಗಿದೆ. ಭಾರತವಾಸಿಗಳು ಯಾರು ಪಾವನರಾಗಿದ್ದರೋ ಅವರೇ ಪತಿತರಾಗುತ್ತಾರೆ. ವಾಮ ಮಾರ್ಗದಲ್ಲಿ
ಹೋಗುವುದರಿಂದಲೇ ಪತಿತರಾಗುವುದು ಆರಂಭವಾಗುತ್ತದೆ. ಭಕ್ತಿಮಾರ್ಗ ಆರಂಭವಾಗುತ್ತದೆ. ಈಗ ನೀವು
ಮಕ್ಕಳಿಗೆ ಜ್ಞಾನವನ್ನು ತಿಳಿಸಲಾಗುತ್ತದೆ, ಇದರಿಂದ ಅರ್ಧಕಲ್ಪ, 21 ಜನ್ಮಗಳಿಗೆ ಸುಖದ ಆಸ್ತಿಯನ್ನು
ಪಡೆದುಕೊಳ್ಳುತ್ತೀರಿ. ಅರ್ಧಕಲ್ಪ ಜ್ಞಾನದ ಪ್ರಾಲಬ್ಧ ನಡೆಯುತ್ತದೆ ನಂತರ ರಾವಣ ರಾಜ್ಯವಾಗುತ್ತದೆ,
ಕೆಳಗಿಳಿಯುವುದು ಪ್ರಾರಂಭವಾಗುತ್ತದೆ. ನೀವು ದೈವೀ ರಾಜ್ಯದಲ್ಲಿದ್ದಿರಿ ನಂತರ ಈಗ ಆಸುರೀ
ರಾಜ್ಯದಲ್ಲಿ ಬಂದಿದ್ದೀರಿ, ಇದನ್ನೇ ನರಕವೆಂದು ಕರೆಯಲಾಗುತ್ತದೆ. ನೀವು ಸ್ವರ್ಗದಲ್ಲಿದ್ದಿರಿ,
ನಂತರ 84 ಜನ್ಮಗಳನ್ನು ಮುಗಿಸಿಕೊಂಡು ಈಗ ನರಕದಲ್ಲಿದ್ದೀರಿ. ಅದು ಸುಖಧಾಮವಾಗಿತ್ತು, ಇದು
ದುಃಖಧಾಮ, 100% ದಿವಾಳಿಯಾಗಿದೆ. 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಅದೇ ಭಾರತವಾಸಿಗಳು
ಪೂಜ್ಯರಿಂದ ಪೂಜಾರಿಗಳಾಗಿದ್ದೀರಿ. ಇದಕ್ಕೆ ಪ್ರಪಂಚದ ಇತಿಹಾಸ-ಭೂಗೋಳವೆಂದು ಹೇಳಲಾಗುತ್ತದೆ. ಇದು
ನೀವೆಲ್ಲಾ ಭಾರತವಾಸಿಯರ ಚಕ್ರವಾಗಿದೆ, ಅನ್ಯ ಧರ್ಮದವರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ.
ಅವರು ಸತ್ಯಯುಗದಲ್ಲಿ ಇರುವುದಿಲ್ಲ, ಸತ್ಯಯುಗ-ತ್ರೇತಾದಲ್ಲಿ ಭಾರತವೇ ಇರುತ್ತದೆ. ಸೂರ್ಯವಂಶಿ,
ಚಂದ್ರವಂಶಿ ನಂತರ ವೈಶ್ಯವಂಶಿ, ಶೂದ್ರವಂಶಿ, ಈಗ ನೀವು ದೇವತಾ ವಂಶಿಗಳಾಗಲು ಬ್ರಾಹ್ಮಣ
ವಂಶಿಯರಾಗಿದ್ದೀರಿ. ಇವೆಲ್ಲವೂ ಭಾರತದ ವರ್ಣಗಳಾಗಿವೆ. ನೀವು ಶಿವ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳಲು ಬ್ರಾಹ್ಮಣರಾಗಿದ್ದೀರಿ. 5000 ವರ್ಷಗಳ ಹಿಂದಿನ ಹಾಗೆಯೇ ನಿಮಗೆ ತಂದೆಯು
ಓದಿಸುತ್ತಿದ್ದಾರೆ. ಕಲ್ಪ-ಕಲ್ಪವೂ ನೀವು ಪಾವನರಾಗಿ ಮತ್ತೆ ಪತಿತರಾಗುತ್ತೀರಿ. ಸುಖಧಾಮದಲ್ಲಿ ಹೋಗಿ
ನಂತರ ದುಃಖಧಾಮದಲ್ಲಿ ಬರುತ್ತೀರಿ ಮತ್ತೆ ಶಾಂತಿಧಾಮದಲ್ಲಿ ಹೋಗಬೇಕಾಗಿದೆ ಯಾವುದನ್ನು ನಿರಾಕಾರಿ
ಪ್ರಪಂಚವೆಂದು ಕರೆಯಲಾಗುತ್ತದೆ. ಆತ್ಮ ಎಂದರೆ ಏನು, ಪರಮಾತ್ಮನೆಂದರೆ ಏನು - ಇದು ಯಾವುದೇ
ಮನುಷ್ಯನಿಗೆ ಗೊತ್ತಿಲ್ಲ. ಆತ್ಮವು ಒಂದು ನಕ್ಷತ್ರರೂಪಿ ಬಿಂದುವಾಗಿದೆ. ಭೃಕುಟಿಯ ಮಧ್ಯದಲ್ಲಿ
ಹೊಳೆಯುತ್ತಿರುವ ನಕ್ಷತ್ರ, ಚಿಕ್ಕದಾದ ಬಿಂದುವೆಂದು ಯಾವುದನ್ನು ದಿವ್ಯ ದೃಷ್ಟಿಯಿಂದ
ನೋಡಲಾಗುತ್ತದೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ನಕ್ಷತ್ರವೆಂದೂ ಹೇಳುವುದು ಸರಿಯಿಲ್ಲ.
ನಕ್ಷತ್ರವೂ ಸಹ ಬಹಳ ದೊಡ್ಡದಾಗಿಯೇ ಇರುತ್ತದೆ, ದೂರದಲ್ಲಿರುವ ಕಾರಣ ಚಿಕ್ಕದಾಗಿ ಕಾಣುತ್ತದೆ. ಇದು
ಒಂದು ಉದಾಹರಣೆಗಾಗಿ ಕೊಡಲಾಗುತ್ತದೆ. ಹೇಗೆ ಮೇಲಿರುವ ಚಿಕ್ಕದಾಗಿಯೇ ಕಾಣುತ್ತದೆಯೋ ಹಾಗೆಯೇ ಆತ್ಮವು
ಚಿಕ್ಕದಾಗಿದೆ, ತಂದೆಯೂ ಸಹ ಒಂದು ಬಿಂದು ಸಮಾನವಾಗಿದ್ದಾರೆ. ಅವರಿಗೆ ಸುಪ್ರೀಂ ಆತ್ಮವೆಂದು
ಹೇಳಲಾಗುತ್ತದೆ. ಅವರ ಮಹಿಮೆಯೇ ಭಿನ್ನವಾಗಿದೆ. ಮನುಷ್ಯ ಸೃಷ್ಟಿಯ ಚೈತನ್ಯ ಬೀಜರೂಪವಾಗಿರುವ ಕಾರಣ
ಅವರಲ್ಲಿ ಎಲ್ಲದರ ಜ್ಞಾನವಿದೆ. ನೀವು ಆತ್ಮಗಳಿಗೂ ಸಹ ಈಗ ಜ್ಞಾನವು ಸಿಗುತ್ತಿದೆ. ಆತ್ಮವೇ
ಜ್ಞಾನವನ್ನು ಗ್ರಹಣ ಮಾಡುತ್ತಿದೆ. ಇಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮದ ಪಾತ್ರವು ಅಡಕವಾಗಿದೆ.
ಅದೂ ಸಹ ಅವಿನಾಶಿಯಾಗಿದೆ, 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಬರುತ್ತೀರಿ. ಇದರ ಅಂತ್ಯ
ಆಗುವುದಕ್ಕೆ ಸಾಧ್ಯವೇ ಇಲ್ಲ. ದೇವತೆಗಳಾಗಿದ್ದಿರಿ, ದೈತರಾಗಿ ನಂತರ ದೇವತೆಗಳಾಗಬೇಕಾಗಿದೆ. ಈ
ಚಕ್ರವು ನಡೆಯುತ್ತಲೇ ಬರುತ್ತದೆ. ಬಾಕಿ ಬೇರೆಲ್ಲವೂ ಬೈಪ್ಲಾಟ್ಗಳಾಗಿವೆ. ಇಸ್ಲಾಮಿ, ಬೌದ್ಧಿ
ಮುಂತಾದವರು ಯಾರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಇದೇ ಸತ್ಯಯುಗ ಭಾರತದಲ್ಲಿ
ಧಾರ್ಮಿಕ, ಸಂಪದ್ಭರಿತವಾಗಿತ್ತು, 84 ಜನ್ಮಗಳನ್ನು ಪಡೆಯುತ್ತಾ ವಿಕಾರಿಗಳಾಗಿದ್ದಾರೆ. ಇದು ವಿಕಾರಿ
ಪ್ರಪಂಚವಾಗಿದೆ, 5000 ವರ್ಷಗಳಹಿಂದೆ ಪವಿತ್ರತೆ, ಶಾಂತಿ ಮತ್ತು ಸಂಪತ್ತು ಇತ್ತು. ತಂದೆಯು
ಮಕ್ಕಳಿಗೆ ನೆನಪು ತರಿಸುತ್ತಾರೆ. ಮುಖ್ಯವಾದುದು ಪವಿತ್ರತೆಯಾಗಿದೆ. ಅದಕ್ಕಾಗಿಯೇ ವಿಕಾರಿಗಳನ್ನು
ನಿರ್ವಿಕಾರಿಯನ್ನಾಗಿ ಮಾಡುವವನೇ ಬಾ ಎಂದು ಕರೆಯುತ್ತಾರೆ. ಅವರೇ ಸದ್ಗತಿ ಕೊಡುವವರು ಆದ್ದರಿಂದ
ಅವರೇ ಸದ್ಗುರುವಾಗಿದ್ದಾರೆ. ನೀವೀಗ ತಂದೆಯ ಮುಖಾಂತರ ಬೆಗ್ಗರ್ ಟು ಪ್ರಿನ್ಸ್ ಅಥವಾ ನರನಿಂದ
ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುತ್ತಿದ್ದೀರಿ. ನಿಮ್ಮದು ಇದು ರಾಜಯೋಗವಾಗಿದೆ, ತಂದೆಯ ಮುಖಾಂತರ
ರಾಜ್ಯಭಾಗ್ಯವು ಸಿಗುತ್ತದೆ. ಆತ್ಮವೇ 84 ಜನ್ಮವನ್ನು ಪಡೆಯುತ್ತದೆ. ಆತ್ಮವೇ ಶರೀರದ ಮುಖಾಂತರ
ಓದುತ್ತದೆ, ಶರೀರವು ಓದುವುದಿಲ್ಲ. ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ, ಆತ್ಮವು ಈ
ಶರೀರದ ಮೂಲಕ ಓದುತ್ತೇನೆಂದು ಹೇಳುತ್ತದೆ, ಇದಕ್ಕೇ ದೇಹೀ-ಅಭಿಮಾನಿ ಎಂದು ಹೇಳಲಾಗುತ್ತದೆ. ಆತ್ಮವು
ಶರೀರದ ಭಿನ್ನವಾದರೆ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಈಗ ನಾನು ಪುಣ್ಯಾತ್ಮನಾಗುತ್ತಿದ್ದೇನೆಂದು
ಆತ್ಮವೇ ಹೇಳುತ್ತದೆ. ಮನುಷ್ಯನು ದೇಹಾಭಿಮಾನದಲ್ಲಿ ಬಂದು ನಾನು ಇದನ್ನು ಮಾಡುತ್ತೇನೆಂದು
ಹೇಳುತ್ತಾರೆ. ಈಗ ನಿಮಗೆ ತಿಳಿದಿದೆ - ನಾವೆಲ್ಲರೂ ಆತ್ಮರಾಗಿದ್ದೇವೆ, ಇದು ನನ್ನ ದೊಡ್ಡ
ಶರೀರವಾಗಿದೆ. ನಾನಾತ್ಮನು ಪರಮಾತ್ಮನಿಂದ ಓದುತ್ತಿದ್ದೇನೆಂದು ಹೇಳುತ್ತದೆ. ನನ್ನನ್ನೇ ನೆನಪು ಮಾಡಿ
ಎಂದು ತಂದೆಯು ಹೇಳುತ್ತಾರೆ. ನೀವು ಚಿನ್ನದ ಯುಗದಲ್ಲಿ ಸತೋಪ್ರಧಾನರಾಗಿದ್ದಿರಿ ನಂತರ ನಿಮ್ಮಲ್ಲಿ
ತುಕ್ಕು ಬೆರಕೆಯಾಗುತ್ತದೆ. ತುಕ್ಕು ಹಿಡಿಯುತ್ತಾ-ಹಿಡಿಯುತ್ತಾ ನೀವು ಪಾವನರಿಂದ ಪತಿತರಾಗಿದ್ದೀರಿ
ಆದ್ದರಿಂದ ಪುನಃ ಪಾವನವಾಗಬೇಕಾಗಿದೆ. ಹೇಳುತ್ತಾರೆ - ಪತಿತ-ಪಾವನ ಬಾ, ಬಂದು ನಮ್ಮೆಲ್ಲರನ್ನೂ
ಪಾವನ ಮಾಡು ಎಂದು ಕರೆಯುತ್ತಾರೆ. ಆದ್ದರಿಂದ ತಂದೆಯು ಸಲಹೆ ಕೊಡುತ್ತಾರೆ. ಹೇ ಪತಿತ ಆತ್ಮ
ನನ್ನನ್ನು ನೆನಪು ಮಾಡು, ನನ್ನನ್ನು ನೆನಪು ಮಾಡುವುದರಿಂದ ನಿನ್ನಲ್ಲಿರುವ ತುಕ್ಕು ಬಿಟ್ಟು
ಹೋಗುತ್ತದೆ ಮತ್ತು ನೀನು ಪಾವನನಾಗುತ್ತೀಯಾ ಎಂದು ತಂದೆಯು ಸಲಹೆ ಕೊಡುತ್ತಾರೆ. ಇದಕ್ಕೆ ಪ್ರಾಚೀನ
ಯೋಗವೆಂದು ಕರೆಯಲಾಗುತ್ತದೆ. ಈ ನೆನಪು ಎಂದರೆ ಯೋಗಾಗ್ನಿಯಿಂದ ತುಕ್ಕು ಭಸ್ಮವಾಗುತ್ತದೆ. ಮೂಲ
ಮಾತಾಗಿದೆ - ಪತಿತರಿಂದ ಪಾವನರಾಗುವುದು. ಸಾಧು-ಸಂತರು ಎಲ್ಲರೂ ಸಹ ಪತಿತರಾಗಿದ್ದಾರೆ.
ನನ್ನೊಬ್ಬನನ್ನು ನೆನಪು ಮಾಡುವುದೇ ಪಾವನರಾಗುವುದಕ್ಕಾಗಿ ಉಪಾಯವಾಗಿದೆ ಎಂದು ತಂದೆಯು
ತಿಳಿಸುತ್ತಾರೆ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ. ನಾನು ನಿಮ್ಮೆಲ್ಲರ ಪ್ರಿಯತಮನಾಗಿದ್ದೇನೆ,
ಆದ್ದರಿಂದ ಕುಡಿಯುತ್ತಾ-ತಿನ್ನುತ್ತಾ, ನಡೆಯುತ್ತಾ ನನ್ನೊಬ್ಬನನ್ನೇ ನೆನಪು ಮಾಡಿ. ನಾನು
ನಿಮ್ಮೆಲ್ಲರನ್ನೂ ಪಾವನ ಮಾಡಿದ್ದೆನು. ನಂತರ ನೀವೆಲ್ಲರೂ ಪತಿತರಾಗಿದ್ದೀರಿ. ನೀವೆಲ್ಲರೂ ಭಕ್ತರು
ನನ್ನ ಪ್ರಿಯತಮೆಯರಾಗಿದ್ದೀರಿ. ಕರ್ಮವನ್ನೂ ಭಲೆ ಮಾಡಿ ಎಂದು ಪ್ರಿಯತಮನು ಹೇಳುತ್ತಾನೆ.
ಬುದ್ಧಿಯಿಂದ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ಇದರಲ್ಲಿಯೇ ಪರಿಶ್ರಮವಿದೆ.
ಅಂದಾಗ ಆಸ್ತಿಯನ್ನು ಪಡೆಯಲು ತಂದೆಯನ್ನು ನೆನಪು ಮಾಡಬೇಕಲ್ಲವೆ. ಯಾರು ಹೆಚ್ಚಾಗಿ ನೆನಪು
ಮಾಡುತ್ತೀರೋ ಅವರಿಗೆ ಹೆಚ್ಚಿನ ಆಸ್ತಿಯು ಸಿಗುತ್ತದೆ. ಇದು ನೆನಪಿನ ಯಾತ್ರೆಯಾಗಿದೆ. ಯಾರೆಷ್ಟು
ನೆನಪು ಮಾಡುತ್ತಾರೆ ಅವರೇ ಪಾವನರಾಗಿ ನನ್ನ ಕೊರಳಿನ ಹಾರವಾಗುತ್ತಾರೆ. ನಿರಾಕಾರಿ ಪ್ರಪಂಚದಲ್ಲಿ
ಎಲ್ಲಾ ಆತ್ಮಗಳ ಒಂದು ವೃಕ್ಷವು ಮಾಡಲ್ಪಟ್ಟಿದೆ, ಅದನ್ನು ನಿರಾಕಾರಿ ವೃಕ್ಷವೆಂದು ಕರೆಯಲಾಗುತ್ತದೆ.
ಇದು ಸಾಕಾರಿ ವೃಕ್ಷವಾಗಿದೆ, ನಿರಾಕಾರಿ ಪ್ರಪಂಚದಿಂದ ಎಲ್ಲರೂ ನಂಬರ್ವಾರ್ ಆಗಿ ಬರಲೇಬೇಕು,
ಬರುತ್ತಾ ಇರುತ್ತಾರೆ. ವೃಕ್ಷವು ಎಷ್ಟು ದೊಡ್ಡದಾಗಿದೆ! ಆತ್ಮವು ಇಲ್ಲಿ ಅಭಿನಯ ಮಾಡಲು ಬರುತ್ತದೆ.
ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲಾ ಆತ್ಮರು ಡ್ರಾಮಾದಲ್ಲಿ ಪಾತ್ರಧಾರಿಗಳಾಗಿದ್ದಾರೆ. ಆತ್ಮವು
ಅವಿನಾಶಿಯಾಗಿದೆ, ಇದರಲ್ಲಿರುವ ಪಾತ್ರವೂ ಸಹ ಅವಿನಾಶಿಯಾಗಿದೆ. ಡ್ರಾಮಾವು ಯಾವಾಗ ಮಾಡಿದರು ಎಂದು
ಹೇಳಲು ಸಾಧ್ಯವಿಲ್ಲ, ಇದು ನಡೆಯುತ್ತಲೇ ಇರುತ್ತದೆ. ಮೊಟ್ಟ ಮೊದಲು ಭಾರತವಾಸಿಗಳು ಸುಖದಲ್ಲಿದ್ದರು
ನಂತರ ದುಃಖದಲ್ಲಿ ಬಂದರು ಮತ್ತೆ ಶಾಂತಿಧಾಮಕ್ಕೆ ಹೋಗುತ್ತಾರೆ. ತಂದೆಯು ನಂತರ ಸುಖಧಾಮಕ್ಕೆ
ಕಳುಹಿಸಿ ಕೊಡುತ್ತಾರೆ. ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ ಅಂದಾಗ ಅದರಲ್ಲಿ
ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದರಲ್ಲಿ
ಪುರುಷಾರ್ಥದನುಸಾರ ರಾಜ್ಯಭಾಗ್ಯವನ್ನು ಪಡೆಯುತ್ತಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ಕೆಲವರೇ
ಮನುಷ್ಯರಿರುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ವೃಕ್ಷವು ಚಿಕ್ಕದಾಗಿರುತ್ತದೆ ಬಾಕಿ ಎಲ್ಲವೂ
ವಿನಾಶವಾಗಿ ಹೋಗುತ್ತದೆ. ಈ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಅರ್ಥಾತ್
ಸ್ವರ್ಗದ ಗೇಟ್ ತೆರೆಯುತ್ತಿದೆ. 5000 ವರ್ಷಗಳ ಮೊದಲೂ ಈ ರೀತಿ ಸ್ವರ್ಗದ ಸ್ಥಾಪನೆಯಾಗಿತ್ತು,
ಅನೇಕ ಧರ್ಮಗಳ ವಿನಾಶವೂ ಆಗಿತ್ತು. ಈ ಯುದ್ಧವನ್ನು ಕಲ್ಯಾಣಕಾರಿ ಯುದ್ಧವೆಂದು ಹೇಳಲಾಗುತ್ತದೆ. ಈಗ
ನರಕದ ಗೇಟ್ ತೆರೆಯಲ್ಪಟ್ಟಿದೆ ನಂತರ ಸ್ವರ್ಗದ ಗೇಟ್ ತೆರೆಯಲಾಗುತ್ತದೆ. ಸ್ವರ್ಗದ ಬಾಗಿಲು ತಂದೆಯ
ಮೂಲಕ ತೆಗೆಯಲಾಗುತ್ತದೆ, ನರಕದ ಬಾಗಿಲು ರಾವಣನ ಮೂಲಕ ತೆರೆಯಲಾಗುತ್ತದೆ. ತಂದೆಯು ಆಸ್ತಿಯನ್ನು
ಕೊಡುತ್ತಾರೆ, ರಾವಣನು ಶಾಪವನ್ನು ಕೊಡುತ್ತಾನೆ. ಈ ಮಾತು ಪ್ರಪಂಚದವರಿಗೆ ತಿಳಿದಿಲ್ಲ, ನೀವು
ಮಕ್ಕಳಿಗೆ ತಿಳಿಸುತ್ತೇನೆ. ವಿದ್ಯಾ ಮಂತ್ರಿಗಳೂ ಸಹ ಈ ಬೇಹದ್ದಿನ ಜ್ಞಾನವನ್ನು ಇಷ್ಟ ಪಡುತ್ತಾರೆ
ಅದನ್ನು ನೀವೇ ಕೊಡಲು ಸಾಧ್ಯ. ಆದರೆ ನೀವು ಗುಪ್ತವಾಗಿದ್ದೀರಿ. ನಿಮ್ಮನ್ನು ಯಾರೂ ಗುರುತಿಸುವುದೂ
ಇಲ್ಲ. ನೀವು ಯೋಗಬಲದಿಂದ ನಿಮ್ಮ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಲಕ್ಷ್ಮೀ-ನಾರಾಯಣರು ಹೇಗೆ
ರಾಜ್ಯಭಾಗ್ಯವನ್ನು ಪಡೆದುಕೊಂಡರು ಎಂದು ನೀವು ತಿಳಿದುಕೊಂಡಿದ್ದೀರಿ. ಇದಕ್ಕೆ
ಶುಭಕಾರಿ-ಕಲ್ಯಾಣಕಾರಿಯುಗವಾಗಿದೆ. ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ.
ಕೃಷ್ಣನನ್ನು ಎಲ್ಲರ ತಂದೆಯೆಂದು ಕರೆಯಲು ಸಾಧ್ಯವಿಲ್ಲ. ನಿರಾಕಾರನನ್ನು ತಂದೆ ಎಂದು
ಕರೆಯಲಾಗುತ್ತದೆ, ಆ ತಂದೆಯನ್ನು ನೆನಪು ಮಾಡಬೇಕಾಗಿದೆ, ಪಾವನರೂ ಆಗಬೇಕಾಗಿದೆ. ವಿಕಾರಗಳನ್ನು
ಅವಶ್ಯವಾಗಿ ಬಿಡಬೇಕಾಗಿದೆ. ಭಾರತವು ನಿರ್ವಿಕಾರಿ ಸುಖಧಾಮವಾಗಿತ್ತು, ಈಗ ವಿಕಾರಿ ದುಃಖಧಾಮವಾಗಿದೆ.
ಒಂದು ಪೈಸೆಗೂ ಬೆಲೆಯಿಲ್ಲದಂತಾಗಿದೆ. ಇದು ಡ್ರಾಮಾದ ಆಟವಾಗಿದೆ, ಇದನ್ನು ಬುದ್ಧಿಯಲ್ಲಿ ಧಾರಣೆ
ಮಾಡಿಕೊಂಡು ಬೇರೆಯವರಿಗೂ ಮಾಡಿಸಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ನೆನಪಿನಿಂದಲೇ
ತಂದೆಯ ಕೊರಳಿನ ಹಾರವಾಗಬೇಕಾಗಿದೆ. ಕರ್ಮವನ್ನು ಮಾಡುತ್ತಾ ತಂದೆಯ ನೆನಪಿನಲ್ಲಿದ್ದು
ವಿಕರ್ಮಾಜೀತರಾಗಬೇಕಾಗಿದೆ.
2) ಪುಣ್ಯಾತ್ಮರಾಗಲು
ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕಾಗಿದೆ.
ವರದಾನ:
ಗೌರವಾನ್ವಿತವಾಗಿ
ತೇರ್ಗಡೆ ಆಗುವುದಕ್ಕಾಗಿ ಸರ್ವರ ಮೂಲಕ ಸಂತುಷ್ಟತೆಯ ಪಾಸ್ಪೋರ್ಟ್ ಪ್ರಾಪ್ತಿ ಮಾಡಿಕೊಳ್ಳುವಂತಹ
ಸಂತುಷ್ಟ ಮಣಿ ಭವ.
ಯಾವ ಮಕ್ಕಳು ತಮ್ಮಿಂದ
ತಾವು, ತಮ್ಮ ಪುರುಷಾರ್ಥ ಅಥವಾ ಸೇವೆಯಿಂದ, ಬ್ರಾಹ್ಮಣ ಪರಿವಾರದ ಸಂಪರ್ಕದಿಂದ ಸದಾ ಸಂತುಷ್ಟವಾಗಿ
ಇರುತ್ತಾರೆಯೋ, ಅವರನ್ನೇ ಸಂತುಷ್ಟಮಣಿ ಎಂದು ಹೇಳಲಾಗುತ್ತದೆ. ಸರ್ವ ಆತ್ಮರುಗಳ ಸಂಪರ್ಕದಲ್ಲಿ
ಸ್ವಯಂನ್ನು ಸಂತುಷ್ಟವಾಗಿ ಇಟ್ಟುಕೊಳ್ಳುವುದು ಅಥವಾ ಸರ್ವರಂತು ಸಂತುಷ್ಟಗೊಳಿಸುವುದು - ಇದರಲ್ಲಿ
ಯಾರು ವಿಜಯಿ ಆಗುತ್ತಾರೆಯೋ ಅವರೇ ವಿಜಯಮಾಲೆಯಲ್ಲಿ ಬರುತ್ತಾರೆ. ಗೌರವಾನ್ವಿತ ತೇರ್ಗಡೆ
ಆಗುವುದಕ್ಕಾಗಿ ಸರ್ವರ ಮೂಲಕ ಸಂತುಷ್ಟತೆಯ ಪಾಸ್ಪೋರ್ಟ್ ಸಿಗಬೇಕಾಗಿದೆ. ಈ ಪಾಸ್ಪೋರ್ಟ್ನ್ನು
ಪಡೆಯುವುದಕ್ಕಾಗಿ ಕೇವಲ ಸಹನೆ ಮಾಡುವ ಅಥವಾ ಸಮಾವೇಶ ಮಾಡಿಕೊಳ್ಳುವ ಶಕ್ತಿಯನ್ನು ಧಾರಣೆ
ಮಾಡಿಕೊಳ್ಳಿರಿ.
ಸ್ಲೋಗನ್:
ದಯಾಹೃದಯಿ ಆಗಿದ್ದು
ಸೇವೆಯ ಮೂಲಕ ನಿರಾಶೆ ಮತ್ತು ಸುಸ್ತಾಗಿರುವ ಆತ್ಮರಿಗೆ ಆಶ್ರಯ ಕೊಡಿ.